ಶ್ರೀಲಕ್ಷ್ಮೀಶೋಭನ ಶೋಭಾನವೆನ್ನಿರೆ ಸುರರೊಳು ಸುಭಗನಿಗೆ ಶೋಭಾನವೆನ್ನಿ ಸುಗುಣನಿಗೆ ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ ಶೋಭಾನವೆನ್ನಿ ಸುರಪ್ರಿಯಗೆ ॥ ಶೋಭಾನೆ ॥ ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ ಪಕ್ಷಿವಾಹನ್ನಗೆರಗುವೆ ಪಕ್ಷಿವಾಹನ್ನಗೆರಗುವೆ ಅನುದಿನ ರಕ್ಷಿಸಲಿ ನಮ್ಮ ವಧೂವರರ ॥ ಶೋಭಾನೆ ॥ ॥ 1 ॥ ಪಾಲಸಾಗರವನ್ನು ಲೀಲೆಯಲಿ ಕಡೆಯಲು ಬಾಲೆ ಮಹಲಕ್ಷುಮಿ ಉದಿಸಿದಳು ಬಾಲೆ ಮಹಲಕ್ಷುಮಿ ಉದಿಸಿದಳಾದೇವಿ ಪಾಲಿಸಲಿ ನಮ್ಮ ವಧೂವರರ ॥ ಶೋಭಾನೆ ॥ ॥ 2 ॥ ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿ ಸುಮ್ಮನೆಯಾಗಿ ಮಲಗಿಪ್ಪ ನಮ್ಮ ನಾರಾಯಣಗೂ ಈ ರಮ್ಮೆಗಡಿಗಡಿಗೂ ಜನ್ಮವೆಂಬುದು ಅವತಾರ ॥ ಶೋಭಾನೆ ॥ ॥ 3 ॥ ಕಂಬುಕಂಠದ ಸುತ್ತ ಕಟ್ಟಿದ ಮಂಗಳಸೂತ್ರ ಅಂಬುಜವೆರಡು ಕರಯುಗದಿ ಅಂಬುಜವೆರಡು ಕರಯುಗದಿ ಧರಿಸಿ ಪೀ- ತಾಂಬರವುಟ್ಟು ಮೆರೆದಳು ॥ 4 ॥ ಒಂದು ಕರದಿಂದ ಅಭಯವನೀವಳೆ ಮ- ತ್ತೊಂದು ಕೈಯಿಂದ ವರಗಳ ಕುಂದಿಲ್ಲದಾನಂದಸಂದೋಹ ಉಣಿಸುವ ಇಂದಿರೆ ನಮ್ಮ ಸಲಹಲಿ ॥ 5 ॥ ಪೊಳೆವ ಕಾಂಚಿಯ ದಾಮ ಉಲಿವ ಕಿಂಕಿಣಿಗಳು ನಲಿವ ಕಾಲಂದುಗೆ ಘಲುಕೆನಲು ನಳನಳಿಸುವ ಮುದ್ದುಮೊಗದ ಚೆಲುವೆ ಲಕ್ಷ್ಮೀ ಸಲಹಲಿ ನಮ್ಮ ವಧೂವರರ ॥ 6 ॥ ರನ್ನದ ಮೊಲೆಗಟ್ಟು ಚಿನ್ನದಾಭರಣಗಳ ಚೆನ್ನೆ ಮಹಲಕ್ಷುಮಿ ಧರಿಸಿದಳೆ ಚೆನ್ನೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ ಮನ್ನೆಯ ವಧೂವರರ ಸಲಹಲಿ ॥ 7 ॥ ಕುಂಭಕುಚದ ಮೇಲೆ ಇಂಬಿಟ್ಟ ಹಾರಗಳು ತುಂಬಿಗುರುಳ ಮುಖಕಮಲ ತುಂಬಿಗುರುಳ ಮುಖಕಮಲದ ಮಹಲಕ್ಷುಮಿ ಜಗ- ದಂಬೆ ವಧೂವರರ ಸಲಹಲಿ ॥ 8 ॥ ಮುತ್ತಿನ ಓಲೆಯನ್ನಿಟ್ಟಳೆ ಮಹಲಕ್ಷ್ಮಿ ಕಸ್ತೂರಿತಿಲಕ ಧರಿಸಿದಳೆ ಕಸ್ತೂರಿತಿಲಕ ಧರಿಸಿದಳಾ ದೇವಿ ಸ- ರ್ವತ್ರ ವಧೂವರರ ಸಲಹಲಿ ॥ ॥ 9 ॥ ಅಂಬುಜನಯನಗಳ ಬಿಂಬಾಧರದ ಶಶಿ ಬಿಂಬದಂತೆಸೆವ ಮೂಗುತಿಮಣಿಯ ಶಶಿ- ಬಿಂಬದಂತೆಸೆವ ಮೂಗುತಿಮಣಿಯ ಮಹಲಕ್ಷುಮಿ ಉಂಬುದಕೀಯಲಿ ವಧೂವರರ್ಗೆ ॥ 10 ॥ ಮುತ್ತಿನಕ್ಷತೆಯಿಟ್ಟು ನವರತ್ನದ ಮುಕುಟವ ನೆತ್ತಿಯ ಮೇಲೆ ಧರಿಸಿದಳೆ ನೆತ್ತಿಯ ಮೇಲೆ ಧರಿಸಿದಳಾ ದೇವಿ ತನ್ನ ಭಕ್ತಿಯ ಜನರ ಸಲಹಲಿ ॥ 11 ॥ ಕುಂದಮಂದಾರ ಜಾಜಿಕುಸುಮಗಳ ವೃಂದವ ಚೆಂದದ ತುರುಬಿಲಿ ತುರುಬಿದಳೆ ಕುಂದಣವರ್ಣದ ಕೋಮಲೆ ಮಹಲಕ್ಷ್ಮಿ ಕೃಪೆ- ಯಿಂದ ವಧೂವರರ ಸಲಹಲಿ ॥ 12 ॥ ಎಂದೆಂದೂ ಬಾಡದ ಅರವಿಂದಮಾಲೆಯ ಇಂದಿರೆ ಪೊಳೆವ ಕೊರಳಲ್ಲಿ ಇಂದಿರೆ ಪೊಳೆವ ಕೊರಳಲ್ಲಿ ಧರಿಸಿದಳೆ ಅವ- ಳಿಂದು ವಧೂವರರ ಸಲಹಲಿ ॥ 13 ॥ ದೇವಾಂಗಪಟ್ಟೆಯ ಮೇಲು ಹೊದ್ದಿಕೆಯ ಭಾವೆ ಮಹಲಕ್ಷುಮಿ ಧರಿಸಿದಳೆ ಭಾವೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ ಸೇವಕಜನರ ಸಲಹಲಿ ॥ 14 ॥ ಈ ಲಕ್ಷುಮಿದೇವಿಯ ಕಾಲುಂಗುರ ಘಲುಕೆನಲು ಲೋಲಾಕ್ಷಿ ಮೆಲ್ಲನೆ ನಡೆತಂದಳು ಸಾಲಾಗಿ ಕುಳ್ಳಿರ್ದ ಸುರರ ಸಭೆಯ ಕಂಡು ಆಲೋಚಿಸಿದಳು ಮನದಲ್ಲಿ ॥ 15 ॥ ತನ್ನ ಮಕ್ಕಳ ಕುಂದ ತಾನೆ ಪೇಳುವುದಕ್ಕೆ ಮನ್ನದಿ ನಾಚಿ ಮಹಲಕ್ಷುಮಿ ತನ್ನಾಮದಿಂದಲಿ ಕರೆಯದೆ ಒಬ್ಬೊಬ್ಬರ ಉನ್ನಂತ ದೋಷಗಳನೆಣಿಸಿದಳು ॥ 16 ॥ ಕೆಲವರು ತಲೆಯೂರಿ ತಪಗೈದು ಪುಣ್ಯವ ಗಳಿಸಿದ್ದರೇನೂ ಫಲವಿಲ್ಲ ಜ್ವಲಿಸುವ ಕೋಪದಿ ಶಾಪವ ಕೊಡುವರು ಲಲನೆಯನಿವರು ಒಲಿಸುವರೆ? ॥ 17 ॥ ಎಲ್ಲ ಶಾಸ್ತ್ರಗಳೋದಿ ದುರ್ಲಭ ಜ್ಞಾನವ ಕಲ್ಲಿಸಿ ಕೊಡುವ ಗುರುಗಳು ಬಲ್ಲಿದ ಧನಕ್ಕೆ ಮರುಳಾಗಿ ಇಬ್ಬರು ಸಲ್ಲದ ಪುರೋಹಿತಕ್ಕೊಳಗಾದರು ॥ 18 ॥ ಕಾಮನಿರ್ಜಿತನೊಬ್ಬ ಕಾಮಿನಿಗೆ ಸೋತೊಬ್ಬ ಭಾಮಿನಿಯ ಹಿಂದೆ ಹಾರಿದವ ॥ ಕಾಮಾಂಧನಾಗಿ ಮುನಿಯ ಕಾಮಿನಿಗೈದಿದನೊಬ್ಬ ಕಾಮದಿ ಗುರುತಲ್ಪಗಾಮಿಯೊಬ್ಬ ॥ 19 ॥ ನಶ್ವರೈಶ್ವರ್ಯವ ಬಯಸುವನೊಬ್ಬ ಪರ- ರಾಶ್ರಯಿಸಿ ಬಾಳುವ ಈಶ್ವರನೊಬ್ಬ ಹಾಸ್ಯವ ಮಾಡಿ ಹಲ್ಲುದುರಿಸಿಕೊಂಡವನೊಬ್ಬ ಅ- ದೃಶ್ಯಾಂಘ್ರಿಯೊಬ್ಬ ಒಕ್ಕಣ್ಣನೊಬ್ಬ ॥ 20 ॥ ಮಾವನ ಕೊಂದೊಬ್ಬ ಮರುಳಾಗಿಹನು ಗಡ ಹಾರ್ವನ ಕೊಂದೊಬ್ಬ ಬಳಲಿದ ಜೀವರ ಕೊಂದೊಬ್ಬ ಕುಲಗೇಡೆಂದೆನಿಸಿದ ಶಿವನಿಂದೊಬ್ಬ ಬಯಲಾದ ॥ 21 ॥ ಧರ್ಮ ಉಂಟೊಬ್ಬನಲಿ ಹೆಮ್ಮೆಯ ಹೆಸರಿಗೆ ಅಮ್ಮಮ್ಮ ತಕ್ಕ ಗುಣವಿಲ್ಲ ಕ್ಷಮ್ಮೆಯ ಬಿಟ್ಟೊಬ್ಬ ನರಕದಲಿ ಜೀವರ ಮರ್ಮವ ಮೆಟ್ಟಿ ಕೊಲಿಸುವ ॥ 22 ॥ ಖಳನಂತೆ ಒಬ್ಬ ತನಗೆ ಸಲ್ಲದ ಭಾಗ್ಯವ ಬಲ್ಲಿದಗಂಜಿ ಬರಿಗೈದ ದುರ್ಲಭ ಮುಕ್ತಿಗೆ ದೂರವೆಂದೆನಿಸುವ ಪಾ- ತಾಳತಳಕ್ಕೆ ಇಳಿದ ಗಡ ! ॥ 23 ॥ ಎಲ್ಲರಾಯುಷ್ಯವ ಶಿಂಶುಮಾರದೇವ ಸಲ್ಲೀಲೆಯಿಂದ ತೊಲಗಿಸುವ ಒಲ್ಲೆ ನಾನಿವರ ನಿತ್ಯ ಮುತ್ತೈದೆಯೆಂದು ಬಲ್ಲವರೆನ್ನ ಭಜಿಸುವರು ॥ 24 ॥ ಪ್ರಕೃತಿಯ ಗುಣದಿಂದ ಕಟ್ಟುವಡೆದು ನಾನಾ ವಿಕೃತಿಗೊಳಗಾಗಿ ಭವದಲ್ಲಿ ಸುಖದುಃಖವುಂಬ ಬೊಮ್ಮಾದಿ ಜೀವರು ದುಃಖಕೆ ದೂರಳೆನಿಪ ಎನಗೆಣೆಯೆ ॥ 25 ॥ ಒಬ್ಬನವನ ಮಗ ಮತ್ತೊಬ್ಬನವನ ಮೊಮ್ಮ ಒಬ್ಬನವನಿಗೆ ಶಯನಾಹ ಒಬ್ಬನವನ ಪೊರುವ ಮತ್ತಿಬ್ಬರವನಿಗಂಜಿ ಅಬ್ಬರದಲಾವಾಗ ಸುಳಿವರು ॥ 26 ॥ ಒಬ್ಬನಾವನ ನಾಮಕಂಜಿ ಬೆಚ್ಚುವ ಗಡ ಸರ್ಬರಿಗಾವ ಅಮೃತವ ಸರ್ಬರಿಗಾವ ಅಮೃತವನುಣಿಸುವ ಅವ- ನೊಬ್ಬನೆ ನಿರನಿಷ್ಟ ನಿರವದ್ಯ ॥ 27 ॥ ನಿರನಿಷ್ಟ ನಿರವದ್ಯ ಎಂಬ ಶ್ರುತ್ಯರ್ಥವ ಒರೆದು ನೋಡಲು ನರಹರಿಗೆ ನರಕಯಾತನೆ ಸಲ್ಲ ದುರಿತಾತಿದೂರನಿಗೆ ಮರುಳ ಮನ ಬಂದಂತೆ ನುಡಿಯದಿರು ॥ 28 ॥ ಒಂದೊಂದು ಗುಣಗಳು ಇದ್ದಾವು ಇವರಲ್ಲಿ ಸಂದಣಿಸಿವೆ ಬಹು ದೋಷ ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು ಇಂದಿರೆ ಪತಿಯ ನೆನೆದಳು ॥ 29 ॥ ದೇವರ್ಷಿ ವಿಪ್ರರ ಕೊಂದು ತನ್ನುದರದೊಳಿಟ್ಟು ತೀವಿರ್ದ ಹರಿಗೆ ದುರಿತವ ಭಾವಜ್ಞರೆಂಬರೆ ಆಲದೆಲೆಯ ಮೇಲೆ ಶಿವನ ಲಿಂಗವ ನಿಲಿಸುವರೆ ॥ 30 ॥ ಹಸಿ-ತೃಷೆ-ಜರೆ-ಮರಣ ರೋಗರುಜಿನಗಳೆಂಬ ಅಸುರಪಿಶಾಚಿಗಳ ಭಯವೆಂಬ ವ್ಯಸನ ಬರಬಾರದು ಎಂಬ ನಾರಾಯಣಗೆ ಪಶು ಮೊದಲಾಗಿ ನೆನೆಯದು ॥ 31 ॥ ತಾ ದುಃಖಿಯಾದರೆ ಸುರರ ರತಿಯ ಕಳೆದು ಮೋದವೀವುದಕೆ ಧರೆಗಾಗಿ ಮಾಧವ ಬಾಹನೆ ಕೆಸರೊಳು ಮುಳುಗಿದವ ಪರರ ಬಾಧಿಪ ಕೆಸರ ಬಿಡಿಸುವನೆ? ॥ 32 ॥ ಬೊಮ್ಮನಾಲಯದಲ್ಲಿ ಇದ್ದವಗೆ ಲಯವುಂಟೆ ? ಜನ್ಮ ಲಯವಿಲ್ಲದವನಿಗೆ ? ಅಮ್ಮಿಯನುಣಿಸಿದ್ದ ಯಶೋದೆಯಾಗಿದ್ದಳೆ ? ಅಮ್ಮ ಇವಗೆ ಹಸಿತೃಷೆಯುಂಟೆ ? ॥ 33 ॥ ಆಗ ಭಕ್ಷ್ಯಭೋಜ್ಯವಿತ್ತು ಪೂಜಿಸುವ ಯೋಗಿಗಳುಂಟೆ? ಧನಧಾನ್ಯ ಆಗ ದೊರಕೊಂಬುದೆ? ಪಾಕ ಮಾಡುವ ವಹ್ನಿ ಮ- ತ್ತಾಗಲೆಲ್ಲಿಹುದು? ವಿಚಾರಿಸಿರೊ ॥ 34 ॥ ರೋಗವನೀವ ವಾತ ಪಿತ್ತ ಶ್ಲೇಷ್ಮ ಆಗ ಕೂಡುವುದೆ? ರಮೆಯೊಡನೆ ಭೋಗಿಸುವವಗೆ ದುರಿತವ ನೆನೆವರೆ? ಈ ಗುಣನಿಧಿಗೆ ಎಣೆಯುಂಟೆ? ॥ 35 ॥ ರಮ್ಮೆದೇವಿಯರನಪ್ಪಿಕೊಂಡಿಪ್ಪುದು ರಮ್ಮೆಯರಸಗೆ ರತಿ ಕಾಣಿರೋ ಅಮ್ಮೋಘವೀರ್ಯವು ಚಲಿಸಿದರೆ ಪ್ರಳಯದಲಿ ಕುಮ್ಮಾರರ್ ಯಾಕೆ ಜನಿಸರು ? ॥ 36 ॥ ಏಕತ್ರ ನಿರ್ಣೀತ ಶಾಸ್ತ್ರಾರ್ಥ ಪರತ್ರಾಪಿ ಬೇಕೆಂಬ ನ್ಯಾಯವ ತಿಳಿದುಕೋ ಶ್ರೀಕೃಷ್ಣನೊಬ್ಬನೆ ಸರ್ವದೋಷಕ್ಕೆ ಸಿ- ಲುಕನೆಂಬೋದು ಸಲಹಲಿಕೆ ॥ 37 ॥ ಎಲ್ಲ ಜಗವ ನುಂಗಿ ದಕ್ಕಿಸಿಕೊಂಡವಗೆ ಸಲ್ಲದು ರೋಗರುಜಿನವು ಬಲ್ಲ ವೈದ್ಯರ ಕೇಳಿ ಅಜೀರ್ತಿ ಮೂಲವಲ್ಲ- ದಿಲ್ಲ ಸಮಸ್ತ ರುಜಿನವು ॥ 38 ॥ ಇಂಥಾ ಮೂರುತಿಯ ಒಳಗೊಂಬ ನರಕ ಬಹು- ಭ್ರಾಂತ ನೀನೆಲ್ಲಿಂದ ತೋರಿಸುವೆಲೋ ? ಸಂತೆಯ ಮರುಳ ಹೋಗೆಲೋ ನಿನ್ನ ಮಾತ ಸಂತರು ಕೇಳಿ ಸೊಗಸರು ॥ 39 ॥ ಶ್ರೀನಾರಾಯಣರ ಜನನಿಜನಕರ ನಾನೆಂಬ ವಾದಿ ನುಡಿಯೆಲೊ ಜಾಣರದರಿಂದರಿಯ ಮೂಲರೂಪವ ತೋರಿ ಶ್ರೀನಾರಸಿಂಹನ ಅವತಾರ ॥ 40 ॥ ಅಂಬುಧಿಯ ಉದಕದಲಿ ಒಡೆದು ಮೂಡಿದ ಕೂರ್ಮ ಎಂಬ ಶ್ರೀಹರಿಯ ಪಿತನಾರು ? ಎಂಬ ಶ್ರೀಹರಿಯ ಪಿತನಾರು ಅದರಿಂದ ಸ್ವ- ಯಂಭುಗಳೆಲ್ಲ ಅವತಾರ ॥ 41 ॥ ದೇವಕಿಯ ಗರ್ಭದಲಿ ದೇವನವತರಿಸಿದ ಭಾವವನು ಬಲ್ಲ ವಿವೇಕಿಗಳು ಈ ವಸುಧೆಯೊಳಗೆ ಕೃಷ್ಣಗೆ ಜನ್ಮವ ಆವ ಪರಿಯಲ್ಲಿ ನುಡಿವೆಯೊ? ॥ 42 ॥ ಆವಳಿಸುವಾಗ ಯಶೋದಾದೇವಿಗೆ ದೇವ ತನ್ನೊಳಗೆ ಹುದುಗಿದ್ದ ಭುವನವೆಲ್ಲವ ತೋರಿದ್ದುದಿಲ್ಲವೆ ? ಆ ವಿಷ್ಣು ಗರ್ಭದೊಳಗಡಗುವನೆ ? ॥ 43 ॥ ಆನೆಯ ಮಾನದಲಿ ಅಡಗಿಸಿದವರುಂಟೆ ? ಅನೇಕ ಕೋಟಿ ಅಜಾಂಡವ ಅಣುರೋಮಕೂಪದಲಿ ಆಳ್ದ ಶ್ರೀಹರಿಯ ಜನನಿಜಠರವು ಒಳಗೊಂಬುದೆ ॥ 44 ॥ ಅದರಿಂದ ಕೃಷ್ಣನಿಗೆ ಜನ್ಮವೆಂಬುದು ಸಲ್ಲ ಮದನನಿವನ ಕುಮಾರನು ಕದನದಿ ಕಣೆಗಳ ಇವನೆದೆಗೆಸೆವನೆ ? ಸುದತೇರಿಗಿವನೆಂತು ಸಿಲುಕುವನೆ? ॥ 45 ॥ ಅದರಿಂದ ಕೃಷ್ಣನಿಗೆ ಪರನಾರೀಸಂಗವ ಕೋ- ವಿದರಾದ ಬುಧರು ನುಡಿವರೆ? ಸದರವೆ ಈ ಮಾತು ? ಸರ್ವವೇದಂಗಳು ಮುದದಿಂದ ತಾವು ಸ್ತುತಿಸುವವು ॥ 46 ॥ ಎಂದ ಭಾಗವತದ ಚೆಂದದ ಮಾತನು ಮಂದ ಮಾನವ ಮನಸಿಗೆ ತಂದುಕೊ ಜಗಕೆ ಕೈವಲ್ಯವೀವ ಮು- ಕುಂದಗೆ ಕುಂದು ಕೊರತೆ ಸಲ್ಲ ॥ 47 ॥ ಹತ್ತು ವರ್ಷದ ಕೆಳಗೆ ಮಕ್ಕಳಾಟಿಕೆಯಲ್ಲಿ ಚಿತ್ತ ಸ್ತ್ರೀಯರಿಗೆ ಎರಗುವುದೆ ? ಅರ್ತಿಯಿಂದರ್ಚಿಸಿದ ಗೋಕುಲದ ಕನ್ಯೆಯರ ಸತ್ಯಸಂಕಲ್ಪ ಬೆರೆತಿದ್ದ ॥ 48 ॥ ಹತ್ತು ಮತ್ತಾರು ಸಾಸಿರ ಸ್ತ್ರೀಯರಲ್ಲಿ ಹತ್ತು ಹತ್ತೆನಿಪ ಕ್ರಮದಿಂದ ಪುತ್ರರ ವೀರ್ಯದಲಿ ಸೃಷ್ಟಿಸಿದವರುಂಟೆ? ಅರ್ತಿಯ ಸೃಷ್ಟಿ ಹರಿಗಿದು ॥ 49 ॥ ರೋಮ ರೋಮ ಕೂಪ ಕೋಟಿವೃಕಂಗಳ ನಿರ್ಮಿಸಿ ಗೋಪಾಲರ ತೆರಳಿಸಿದ ನಮ್ಮ ಶ್ರೀಕೃಷ್ಣನು ಮಕ್ಕಳ ಸೃಜಿಸುವ ಮ- ಹಿಮ್ಮೆ ಬಲ್ಲವರಿಗೆ ಸಲಹಲಿಕೆ ॥ 50 ॥ ಮಣ್ಣನೇಕೆ ಮೆದ್ದೆಯೆಂಬ ಯಶೋದೆಗೆ ಸಣ್ಣ ಬಾಯೊಳಗೆ ಜಗಂಗಳ ಕಣ್ಣಾರೆ ತೋರಿದ ನಮ್ಮ ಶ್ರೀಕೃಷ್ಣನ ಘನ್ನತೆ ಬಲ್ಲವರಿಗೆ ಸಲಹಲಿಕೆ ॥ 51 ॥ ನಾರದ-ಸನಕಾದಿ ಮೊದಲಾದ ಯೋಗಿಗಳು ನಾರಿಯರಿಗೆ ಮರುಳಾದರೆ ಓರಂತೆ ಶ್ರೀಕೃಷ್ಣನಡಿಗಡಿಗೆರಗುವರೆ? ಆರಾಧಿಸುತ್ತ ಭಜಿಸುವರೆ? ॥ 52 ॥ ಅಂಬುಜಸಂಭವ ತ್ರಿಯಂಬಕ ಮೊದಲಾದ ನಂಬಿದವರಿಗೆ ವರವಿತ್ತ ಸಂಭ್ರಮದ ಸುರರು ಎಳ್ಳಷ್ಟು ಕೋಪಕ್ಕೆ ಇಂಬಿದ್ದವರಿವನ ಭಜಿಸುವರೆ? ॥ 53 ॥ ಆವನಂಗುಷ್ಠವ ತೊಳೆದ ಗಂಗಾದೇವಿ ಪಾವನಳೆನಿಸಿ ಮೆರೆಯಳೆ ? ಜೀವನ ಸೇರುವ ಪಾಪವ ಕಳೆವಳು ಈ ವಾಸುದೇವಗೆ ಎಣೆಯುಂಟೆ ? ॥ 54 ॥ ಕಿಲ್ಬಿಷವಿದ್ದರೆ ಅಗ್ರಪೂಜೆಯನು ಸರ್ಬರಾಯರ ಸಭೆಯೊಳಗೆ ಉಬ್ಬಿದ ಮನದಿಂದ ಧರ್ಮಜ ಮಾಡುವನೆ ? ಕೊಬ್ಬದಿರೆಲೊ ಪರವಾದಿ ॥ 55 ॥ ಸಾವಿಲ್ಲದ ಹರಿಗೆ ನರಕಯಾತನೆ ಸಲ್ಲ ಜೀವಂತರಿಗೆ ನರಕದಲಿ ನೋವನೀವನೆ ನಿಮ್ಮ ಯಮದೇವನು ಗೋವ ನೀ ಹರಿಯ ಗುಣವರಿಯ ! ॥ 56 ॥ ನರಕವಾಳುವ ಯಮಧರ್ಮರಾಯ ತನ್ನ ನರಜನ್ಮದೊಳಗೆ ಪೊರಳಿಸಿ ಮರಳಿ ತನ್ನರಕದಲಿ ಪೊರಳಿಸಿ ಕೊಲುವನು ? ಕುರು ನಿನ್ನ ಕುಹಕ ಕೊಳದಲ್ಲಿ ॥ 57 ॥ ಬೊಮ್ಮನ ನೂರು ವರುಷ ಪರಿಯಂತ ಪ್ರಳಯದಲಿ ಸುಮ್ಮನೆಯಾಗಿ ಮಲಗಿರ್ದ ನಮ್ಮ ನಾರಾಯಣಗೆ ಹಸಿ-ತೃಷೆ-ಜರೆ-ಮರಣ ದು- ಷ್ಕರ್ಮ ದುಃಖಂಗಳು ತೊಡಸುವರೆ ? ॥ 58 ॥ ರಕ್ಕಸರಸ್ತ್ರಗಳಿಂದ ಗಾಯವಡೆಯದ ಅಕ್ಷಯಕಾಯದ ಸಿರಿಕೃಷ್ಣ ತುಚ್ಛ ಯಮಭಟರ ಶಸ್ತ್ರಕಳುಕುವನಲ್ಲ ಹುಚ್ಚ ನೀ ಹರಿಯ ಗುಣವರಿಯ ॥ 59 ॥ ಕಿಚ್ಚ ನುಂಗಿದನು ನಮ್ಮ ಶ್ರೀಕೃಷ್ಣನು ತುಚ್ಛ ನರಕದೊಳು ಅನಲನಿಗೆ ಬೆಚ್ಚುವನಲ್ಲ ಅದರಿಂದಿವಗೆ ನರಕ ಮೆಚ್ಚುವರಲ್ಲ ಬುಧರೆಲ್ಲ ॥ 60 ॥ ಮನೆಯಲ್ಲಿ ಕ್ಷಮೆಯ ತಾಳ್ದ ವೀರಭಟ ರಣರಂಗದಲ್ಲಿ ಕ್ಷಮಿಸುವನೆ ಅಣುವಾಗಿ ನಮ್ಮ ಹಿತಕೆ ಮನದೊಳಗಿನ ಕೃಷ್ಣ ಮುನಿವ ಕಾಲಕ್ಕೆ ಮಹತ್ತಾಹ ॥ 61 ॥ ತಾಯ ಪೊಟ್ಟೆಯಿಂದ ಮೂಲರೂಪವ ತೋರಿ ಆಯುಧಸಹಿತ ಪೊರವಂಟ ನ್ಯಾಯಕೋವಿದರು ಪುಟ್ಟಿದನೆಂಬರೆ ? ಬಾಯಿಗೆ ಬಂದಂತೆ ಬೊಗಳದಿರು ॥ 62 ॥ ಉಟ್ಟ ಪೀತಾಂಬರ ತೊಟ್ಟ ಭೂಷಣಂಗಳು ಇಟ್ಟ ನವರತ್ನದ ಮುಕುಟವು ಮೆಟ್ಟಿದ ಕುರುಹ ಎದೆಯಲ್ಲಿ ತೋರಿದ ಶ್ರೀ- ವಿಠ್ಠಲ ಪುಟ್ಟಿದನೆನಬಹುದೆ ? ॥ 63 ॥ ಋಷಭಹಂಸಮೇಷಮಹಿಷಮೂಷಕವಾಹನವೇರಿ ಮಾ- ನಿಸರಂತೆ ಸುಳಿವ ಸುರರೆಲ್ಲ ಎಸೆವ ದೇವೇಶಾನರ ಸಹಸಕ್ಕೆ ಮಣಿದರು ಕುಸುಮನಾಭನಿಗೆ ಸರಿಯುಂಟೆ ? ॥ 64 ॥ ಒಂದೊಂದು ಗುಣಗಳು ಇದ್ದಾವು ಇವರಲ್ಲಿ ಸಂದಣಿಸಿವೆ ಬಹುದೋಷ ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು ಇಂದಿರೆ ಪತಿಯ ನೆನೆದಳು ॥ 65 ॥ ಇಂತು ಚಿಂತಿಸಿ ರಮೆ ಸಂತ ರಾಮನ ಪದವ ಸಂತೋಷಮನದಿ ನೆನೆವುತ್ತ ಸಂತೋಷಮನದಿ ನೆನೆವುತ್ತ ತನ್ನ ಶ್ರೀ- ಕಾಂತನಿದ್ದೆಡೆಗೆ ನಡೆದಳು ॥ 66 ॥ ಕಂದರ್ಪಕೋಟಿಗಳ ಗೆಲುವ ಸೌಂದರ್ಯದ ಚೆಂದವಾಗಿದ್ದ ಚೆಲುವನ ಇಂದಿರೆ ಕಂಡು ಇವನೆ ತನಗೆ ಪತಿ - ಯೆಂದವನ ಬಳಿಗೆ ನಡೆದಳು ॥ 67 ॥ ಇತ್ತರದ ಸುರರ ಸುತ್ತ ನೋಡುತ್ತ ಲಕ್ಷ್ಮಿ ಚಿತ್ತವ ಕೊಡದೆ ನಸುನಗುತ ಚಿತ್ತವ ಕೊಡದೆ ನಸುನಗುತ ಬಂದು ಪುರು- ಷೋತ್ತಮನ ಕಂಡು ನಮಿಸಿದಳು ॥ 68 ॥ ನಾನಾಕುಸುಮಗಳಿಂದ ಮಾಡಿದ ಮಾಲೆಯ ಶ್ರೀನಾರಿ ತನ್ನ ಕರದಲ್ಲಿ ಪೀನಕಂಧರದ ತ್ರಿವಿಕ್ರಮರಾಯನ ಕೊರ- ಳಿನ ಮೇಲಿಟ್ಟು ನಮಿಸಿದಳು ॥ 69 ॥ ಉಟ್ಟ ಪೊಂಬಟ್ಟೆಯ ತೊಟ್ಟಾಭರಣಗಳು ಇಟ್ಟ ನವರತ್ನದ ಮುಕುಟವು ದುಷ್ಟಮರ್ದನನೆಂಬ ಕಡೆಯ ಪೆಂಡೆಗಳ ವಟ್ಟಿದ್ದ ಹರಿಗೆ ವಧುವಾದಳು ॥ 70 ॥ ಕೊಂಬು ಚೆಂಗಹಳೆಗಳು ತಾಳಮದ್ದಳೆಗಳು ತಂಬಟೆ ಭೇರಿ ಪಟಹಗಳು ಭೊಂ ಭೊಂ ಎಂಬ ಶಂಖ ಡೊಳ್ಳು ಮೌರಿಗಳು ಅಂಬುಧಿಯ ಮನೆಯಲ್ಲೆಸೆದವು ॥ 71 ॥ ಅರ್ಘ್ಯ ಪಾದ್ಯಾಚಮನ ಮೊದಲಾದ ಷೋಡಶ- ನರ್ಘ್ಯ ಪೂಜೆಯಿತ್ತನಳಿಯಂಗೆ ಒಗ್ಗಿದ ಮನದಿಂದ ಧಾರೆಯೆರೆದನೆ ಸಿಂಧು ಸದ್ಗತಿಯಿತ್ತು ಸಲಹೆಂದ ॥ 72 ॥ ವೇದೋಕ್ತಮಂತ್ರ ಪೇಳಿ ವಸಿಷ್ಠ-ನಾರದ ಮೊದ- ಲಾದ ಮುನೀಂದ್ರರು ಮುದದಿಂದ ವಧೂವರರ ಮೇಲೆ ಶೋಭನದಕ್ಷತೆಯನು ಮೋದವೀವುತ್ತ ತಳಿದರು ॥ 73 ॥ ಸಂಭ್ರಮದಿಂದಂಬರದಿ ದುಂದುಭಿ ಮೊಳಗಲು ತುಂಬುರು ನಾರದರು ತುತಿಸುತ್ತ ತುಂಬುರುನಾರದರು ತುತಿಸುತ್ತ ಪಾಡಿದರು ಪೀ- ತಾಂಬರಧರನ ಮಹಿಮೆಯ ॥ 74 ॥ ದೇವನಾರಿಯರೆಲ್ಲ ಬಂದೊದಗಿ ಪಾಠಕರು ಓವಿ ಪಾಡುತ್ತ ಕುಣಿದರು ದೇವತರುವಿನ ಹೂವಿನ ಮಳೆಗಳ ಶ್ರೀವರನ ಮೇಲೆ ಕರೆದರು ॥ 75 ॥ ಮುತ್ತುರತ್ನಗಳಿಂದ ತೆತ್ತಿಸಿದ ಹಸೆಯ ನವ- ರತ್ನಮಂಟಪದಿ ಪಸರಿಸಿ ನವ- ರತ್ನಮಂಟಪದಿ ಪಸರಿಸಿ ಕೃಷ್ಣನ ಮುತ್ತೈದೆಯರೆಲ್ಲ ಕರೆದರು ॥ 76 ॥ ಶೇಷಶಯನನೆ ಬಾ ದೋಷದೂರನೆ ಬಾ ಭಾಸುರಕಾಯ ಹರಿಯೆ ಬಾ ಭಾಸುರಕಾಯ ಹರಿಯೆ ಬಾ ಶ್ರೀಕೃಷ್ಣ ವಿ- ಲಾಸದಿಂದೆಮ್ಮ ಹಸೆಗೆ ಬಾ ॥ 77 ॥ ಕಂಜಲೋಚನನೆ ಬಾ ಮಂಜುಳಮೂರ್ತಿಯೆ ಬಾ ಕುಂಜರವರದಾಯಕನೆ ಬಾ ಕುಂಜರವರದಾಯಕನೆ ಬಾ ಶ್ರೀಕೃಷ್ಣ ನಿ- ರಂಜನ ನಮ್ಮ ಹಸೆಗೆ ಬಾ ॥ 78 ॥ ಆದಿಕಾಲದಲ್ಲಿ ಆಲದೆಲೆಯ ಮೇಲೆ ಶ್ರೀದೇವಿಯರೊಡನೆ ಪವಡಿಸಿದ ಶ್ರೀದೇವಿಯರೊಡನೆ ಪವಡಿಸಿದ ಶ್ರೀಕೃಷ್ಣ ಮೋದದಿಂದೆಮ್ಮ ಹಸೆಗೆ ಬಾ ॥ 79 ॥ ಆದಿಕಾರಣನಾಗಿ ಆಗ ಮಲಗಿದ್ದು ಮೋದ ಜೀವರ ತನ್ನ ಉದರದಲಿ ಮೋದ ಜೀವರ ತನ್ನುದರದಲಿ ಇಂಬಿಟ್ಟ ಅ- ನಾದಿಮೂರುತಿಯೆ ಹಸೆಗೆ ಬಾ ॥ 80 ॥ ಚಿನ್ಮಯವೆನಿಪ ನಿಮ್ಮ ಮನೆಗಳಲ್ಲಿ ಜ್ಯೋ- ತಿರ್ಮಯವಾದ ಪದ್ಮದಲ್ಲಿ ರಮ್ಮೆಯರೊಡಗೂಡಿ ರಮಿಸುವ ಶ್ರೀಕೃಷ್ಣ ನಮ್ಮ ಮನೆಯ ಹಸೆಗೆ ಬಾ ॥ 81 ॥ ನಾನಾವತಾರದಲಿ ನಂಬಿದ ಸುರರಿಗೆ ಆನಂದವೀವ ಕರುಣಿ ಬಾ ಆನಂದವೀವ ಕರುಣಿ ಬಾ ಶ್ರೀಕೃಷ್ಣ ಶ್ರೀನಾರಿಯರೊಡನೆ ಹಸೆಗೆ ಬಾ ॥ 82 ॥ ಬೊಮ್ಮನ ಮನೆಯಲ್ಲಿ ರನ್ನಪೀಠದಿ ಕುಳಿತು ಒಮ್ಮನದಿ ನೇಹವ ಮಾಡುವ ನಿರ್ಮಲಪೂಜೆಯ ಕೈಗೊಂಡ ಶ್ರೀಕೃಷ್ಣ ಪರ- ಬೊಮ್ಮಮೂರುತಿಯೆ ಹಸೆಗೆ ಬಾ ॥ 83 ॥ ಮುಖ್ಯಪ್ರಾಣನ ಮನೆಯಲ್ಲಿ ಭಾರತಿಯಾಗ- ಲಿಕ್ಕಿ ಬಡಿಸಿದ ರಸಾಯನವ ಸಕ್ಕರೆಗೂಡಿದ ಪಾಯಸ ಸವಿಯುವ ರಕ್ಕಸವೈರಿಯೆ ಹಸೆಗೆ ಬಾ ॥ 84 ॥ ರುದ್ರನ ಮನೆಯಲ್ಲಿ ರುದ್ರಾಣಿದೇವಿಯರು ಭದ್ರಮಂಟಪದಿ ಕುಳ್ಳಿರಿಸಿ ಸ್ವಾದ್ವನ್ನಗಳನು ಬಡಿಸಲು ಕೈಗೊಂಬ ಮುದ್ದು ನರಸಿಂಹ ಹಸೆಗೆ ಬಾ ॥ 85 ॥ ಗರುಡನ ಮೇಲೇರಿ ಗಗನಮಾರ್ಗದಲ್ಲಿ ತರತರದಿ ಸ್ತುತಿಪ ಸುರಸ್ತ್ರೀಯರ ಮೆರೆವ ಗಂಧರ್ವರ ಗಾನವ ಸವಿಯುವ ನರಹರಿ ನಮ್ಮ ಹಸೆಗೆ ಬಾ ॥ 86 ॥ ನಿಮ್ಮಣ್ಣನ ಮನೆಯ ಸುಧರ್ಮಸಭೆಯಲ್ಲಿ ಉಮ್ಮೆಯರಸ ನಮಿಸಿದ ಧರ್ಮರಕ್ಷಕನೆನಿಪ ಕೃಷ್ಣ ಕೃಪೆಯಿಂದ ಪ- ರಮ್ಮ ಮೂರುತಿಯೆ ಹಸೆಗೆ ಬಾ ॥ 87 ॥ ಇಂದ್ರನ ಮನೆಗ್ಹೋಗಿ ಅದಿತಿಗೆ ಕುಂಡಲವಿತ್ತು ಅಂದದ ಪೂಜೆಯ ಕೈಗೊಂಡು ಅಂದದ ಪೂಜೆಯ ಕೈಗೊಂಡು ಸುರತರುವ ಇಂದಿರೆಗಿತ್ತ ಹರಿಯೆ ಬಾ ॥ 88 ॥ ನಿಮ್ಮ ನೆನೆವ ಮುನಿಹೃದಯದಲಿ ನೆಲಸಿದ ಧರ್ಮರಕ್ಷಕನೆನಿಸುವ ಸಮ್ಮತವಾಗಿದ್ದ ಪೂಜೆಯ ಕೈಗೊಂಬ ನಿ- ಸ್ಸೀಮಮಹಿಮ ಹಸೆಗೆ ಬಾ ॥ 89 ॥ ಮುತ್ತಿನ ಸತ್ತಿಗೆ ನವರತ್ನದ ಚಾಮರ ಸುತ್ತ ನಲಿವ ಸುರಸ್ತ್ರೀಯರ ನೃತ್ಯವ ನೋಡುವ ಚಿತ್ರವಾದ್ಯಂಗಳ ಸಂ- ಪತ್ತಿನ ಹರಿಯೆ ಹಸೆಗೆ ಬಾ ॥ 90 ॥ ಎನಲು ನಗುತ ಬಂದು ಹಸೆಯ ಮೇಲೆ ವನಿತೆ ಲಕ್ಷುಮಿಯೊಡಗೂಡಿ ಅನಂತವೈಭವದಿ ಕುಳಿತ ಕೃಷ್ಣಗೆ ನಾಲ್ಕು ದಿನದುತ್ಸವವ ನಡೆಸಿದರು ॥ 91 ॥ ಅತ್ತೇರೆನಿಪ ಗಂಗೆ ಯಮುನೆ ಸರಸ್ವತಿ ಭಾ- ರತ್ತಿ ಮೊದಲಾದ ಸುರಸ್ತ್ರೀಯರು ಮುತ್ತಿನಾಕ್ಷತೆಯನು ಶೋಭನವೆನುತ ತ- ಮ್ಮರ್ತಿಯಳಿಯಗೆ ತಳಿದರು ॥ 92 ॥ ರತ್ನದಾರತಿಗೆ ಸುತ್ತಮುತ್ತನೆ ತುಂಬಿ ಮುತ್ತೈದೆಯರೆಲ್ಲ ಧವಳದ ಮುತ್ತೈದೆಯರೆಲ್ಲ ಧವಳದ ಪದನ ಪಾ- ಡುತ್ತಲೆತ್ತಿದರೆ ಸಿರಿವರಗೆ ॥ 93 ॥ ಬೊಮ್ಮ ತನ್ನರಸಿ ಕೂಡೆ ಬಂದೆರಗಿದ ಉಮ್ಮೆಯರಸ ನಮಿಸಿದ ಅಮ್ಮರರೆಲ್ಲರು ಬಗೆಬಗೆ ಉಡುಗೊರೆಗಳ ರಮ್ಮೆಯರಸಗೆ ಸಲಿಸಿದರು ॥ 94 ॥ ಸತ್ಯಲೋಕದ ಬೊಮ್ಮ ಕೌಸ್ತುಭರತ್ನವನಿತ್ತ ಮುಕ್ತಸುರರು ಮುದದಿಂದ ಮುತ್ತಿನ ಕಂಠೀಸರ ಮುಖ್ಯಪ್ರಾಣನಿತ್ತ ಮಸ್ತಕಮಣಿಯ ಶಿವನಿತ್ತ ॥ 95 ॥ ತನ್ನರಸಿ ಕೂಡೆ ಸವಿನುಡಿ ನುಡಿವಾಗ ವ- ದನ್ನದಲ್ಲಿದ್ದಗ್ನಿ ಕೆಡದಂತೆ ವಹ್ನಿಪ್ರತಿಷ್ಠೆಯ ಮಾಡಿ ಅವನೊಳಗಿದ್ದ ತನ್ನಾಹುತಿಯಿತ್ತ ಸುರರಿಗೆ ॥ 96 ॥ ಕೊಬ್ಬಿದ ಖಳರೋಡಿಸಿ ಅಮೃತಾನ್ನ ಊಟಕ್ಕೆ ಉಬ್ಬಿದ ಹರುಷದಿ ಉಣಿಸಲು ಉಬ್ಬಿದ ಹರುಷದಿ ಉಣಿಸಬೇಕೆಂದು ಸಿಂಧು ಸರ್ಬರಿಗೆಡೆಯ ಮಾಡಿಸಿದ ॥ 97 ॥ ಮಾವನ ಮನೆಯಲ್ಲಿ ದೇವರಿಗೌತಣವ ದಾ- ನವರು ಕೆಡಿಸದೆ ಬಿಡರೆಂದು ದಾ- ನವರು ಕೆಡಿಸದೆ ಬಿಡರೆಂದು ಶ್ರೀಕೃಷ್ಣ ದೇವ ಸ್ತ್ರೀವೇಷವ ಧರಿಸಿದ ॥ 98 ॥ ತನ್ನ ಸೌಂದರ್ಯದಿಂದನ್ನಂತಮಡಿಯಾದ ಲಾ- ವಣ್ಯದಿ ಮೆರೆವ ನಿಜಪತಿಯ ಹೆಣ್ಣುರೂಪವ ಕಂಡು ಕನ್ಯೆ ಮಹಲಕ್ಷುಮಿ ಇವ- ಗನ್ಯರೇಕೆಂದು ಬೆರಗಾದಳು ॥ 99 ॥ ಲಾವಣ್ಯಮಯವಾದ ಹರಿಯ ಸ್ತ್ರೀವೇಷಕ್ಕೆ ಭಾವುಕರೆಲ್ಲ ಮರುಳಾಗೆ ಮಾವರ ಸುಧೆಯ ಕ್ರಮದಿಂದ ಬಡಿಸಿ ತನ್ನ ಸೇವಕ ಸುರರಿಗುಣಿಸಿದ ॥ 100 ॥ ನಾಗನ ಮೇಲೆ ತಾ ಮಲಗಿದ್ದಾಗ ಆಗಲೆ ಜಗವ ಜತನದಿ ಆಗಲೆ ಜಗವ ಜತನದಿ ಧರಿಸೆಂದು ನಾಗಬಲಿಯ ನಡೆಸಿದ ॥ 101 ॥ ಕ್ಷುಧೆಯ ಕಳೆವ ನವರತ್ನದ ಮಾಲೆಯ ಮುದದಿಂದ ವಾರಿಧಿ ವಿಧಿಗಿತ್ತ ಚದುರಹಾರವ ವಾಯುದೇವರಿಗಿತ್ತ ವಿಧುವಿನ ಕಲೆಯ ಶಿವಗಿತ್ತ ॥ 102 ॥ ಶಕ್ರ ಮೊದಲಾದ ದಿಕ್ಪಾಲಕರಿಗೆ ಸೊಕ್ಕಿದ ಚೌದಂತ ಗಜಂಗಳ ಉಕ್ಕಿದ ಮನದಿಂದ ಕೊಟ್ಟ ವರುಣ ಮದು- ಮಕ್ಕಳಾಯುಷ್ಯವ ಬೆಳೆಸೆಂದ ॥ 103 ॥ ಮತ್ತೆ ದೇವೇಂದ್ರಗೆ ಪಾರಿಜಾತವನಿತ್ತ ಚಿತ್ತವ ಸೆಳೆವಪ್ಸರಸ್ತ್ರೀಯರ ಹತ್ತು ಸಾವಿರ ಕೊಟ್ಟ ವರುಣದೇವ ಹರಿ- ಭಕ್ತಿಯ ಮನದಿ ಬೆಳೆಸೆಂದ ॥ 104 ॥ ಪೊಳೆವ ನವರತ್ನದ ರಾಶಿಯ ತೆಗೆತೆಗೆದು ಉಳಿದ ಅಮರರಿಗೆ ಸಲಿಸಿದ ಉಳಿದ ಅಮರರಿಗೆ ಸಲಿಸಿದ ಸಮುದ್ರ ಕಳುಹಿದನವರವರ ಮನೆಗಳಿಗೆ ॥ 105 ॥ ಉನ್ನಂತ ನವರತ್ನಮಯವಾದ ಅರಮನೆಯ ಚೆನ್ನೇಮಗಳಿಂದ ವಿರಚಿಸಿ ತನ್ನ ಅಳಿಯಗೆ ಸ್ಥಿರವಾಗಿ ಮಾಡಿಕೊಟ್ಟು ಇನ್ನೊಂದು ಕಡೆಯಡಿ ಇಡದಂತೆ ॥ 106 ॥ ಹಯವದನ ತನ್ನ ಪ್ರಿಯಳಾದ ಲಕ್ಷುಮಿಗೆ ಜಯವಿತ್ತ ಕ್ಷೀರಾಂಬುಧಿಯಲ್ಲಿ ಜಯವಿತ್ತ ಕ್ಷೀರಾಂಬುಧಿಯಲ್ಲಿ ಶ್ರೀಕೃಷ್ಣ ದಯದಿ ನಮ್ಮೆಲ್ಲರ ಸಲಹಲಿ ॥ 107 ॥ ಈ ಪದನ ಮಾಡಿದ ವಾದಿರಾಜೇಂದ್ರಮುನಿಗೆ ಶ್ರೀಪತಿಯಾದ ಹಯವದನ ತಾಪವ ಕಳೆದು ತನ್ನ ಶ್ರೀಚರಣ ಸ- ಮೀಪದಲ್ಲಿಟ್ಟು ಸಲಹಲಿ ॥ 108 ॥ ಇಂತು ಸ್ವಪ್ನದಲ್ಲಿ ಕೊಂಡಾಡಿಸಿಕೊಂಡ ಲಕ್ಷ್ಮೀ- ಕಾಂತನ ಕಂದನೆನಿಸುವ ಸಂತರ ಮೆಚ್ಚಿನ ವಾದಿರಾಜೇಂದ್ರ ಮುನಿ ಪಂಥದಿ ಪೇಳಿದ ಪದವಿದು ॥ 109 ॥ ಶ್ರೀಯರಸ ಹಯವದನಪ್ರಿಯ ವಾದಿರಾಜ- ರಾಯ ರಚಿಸಿದ ಪದವಿದು ಆಯುಷ್ಯ ಭವಿಷ್ಯ ದಿನದಿನಕೆ ಹೆಚ್ಚುವುದು ನಿ- ರಾಯಾಸದಿಂದ ಸುಖಿಪರು ॥ 110 ॥ ಬೊಮ್ಮನ ದಿನದಲ್ಲಿ ಒಮ್ಮೊಮ್ಮೆ ಈ ಮದುವೆ ಕ್ರಮ್ಮದಿ ಮಾಡಿ ವಿನೋದಿಸುವ ನಮ್ಮ ನಾರಾಯಣಗೂ ಈ ರಮ್ಮೆಗಡಿಗಡಿಗೂ ಅಸು- ರಮ್ಮೋಹನವೆ ನರನಟನೆ ॥ 111 ॥ ಮದುವೆಯ ಮನೆಯಲ್ಲಿ ಈ ಪದವ ಪಾಡಿದರೆ ಮದುಮಕ್ಕಳಿಗೆ ಮುದವಹುದು ವಧುಗಳಿಗೆ ವಾಲೆಭಾಗ್ಯ ದಿನದಿನಕೆ ಹೆಚ್ಚುವುದು ಮದನನಯ್ಯನ ಕೃಪೆಯಿಂದ ॥ 112 ॥ ಶೋಭಾನವೆನ್ನಿರೆ ಸುರರೊಳು ಸುಭಗನಿಗೆ ಶೋಭಾನವೆನ್ನಿ ಸುಗುಣನಿಗೆ ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ ಶೋಭಾನವೆನ್ನಿ ಸುರಪ್ರಿಯಗೆ ॥ ಶೋಭಾನೆ ॥ ॥ 113 ॥ ಶೋಭಾನವೆನ್ನಿರೆ ಸುರರೊಳು ಸುಭಗನಿಗೆ ಶೋಭಾನವೆನ್ನಿ ಸುಗುಣನಿಗೆ ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ ಶೋಭಾನವೆನ್ನಿ ಸುರಪ್ರಿಯಗೆ ॥ ಶೋಭಾನೆ ॥ ॥ ಪ ॥ ಹಡಗಿನೊಳಗಿಂದ ಬಂದ ಕಡು ಮುದ್ದು ಶ್ರೀಕೃಷ್ಣಗೆ ಕಡೆಗೋಲು ನೇಣ ಪಿಡಿದನೆ ॥ ಕಡಗೋಲು ನೇಣ ಪಿಡಿದನೆ ದೇವಕಿಯ ತನಯಗಾರುತಿಯ ಬೆಳಗಿರೆ ॥ ಶೋಭಾನೆ ॥ ಆಚಾರ್ಯರ ಕೈಯಿಂದ ಅಧಿಕಪೂಜೆಯಗೊಂಬ ಕಾಂತೆ ಲಕ್ಷ್ಮಿಯ ಅರಸನೆ ॥ ಕಾಂತೆ ಲಕ್ಷ್ಮಿಯ ಅರಸನೆ ಶ್ರೀಕೃಷ್ಣಗೆ ಕಾಂಚನದಾರತಿಯ ಬೆಳಗಿರೆ ॥ ಶೋಭಾನೆ ॥ ಮಧ್ವಸರೋವರದಿ ಶುದ್ಧ ಪೂಜೆಯ ಕೊಂಬ ಮುದ್ದು ರುಕ್ಮಿಣಿಯರಸನೆ ॥ ಮುದ್ದು ರುಕ್ಮಿಣಿಯ ಅರಸನೆ ಶ್ರೀಕೃಷ್ಣಗೆ ಮುತ್ತಿನಾರತಿಯ ಬೆಳಗಿರೆ ॥ ಶೋಭಾನೆ ॥ ಪಾಂಡವರ ಪ್ರಿಯನೆ ಚಾಣೂರಮರ್ದನನೆ ಸತ್ಯಭಾಮೆಯ ಅರಸನೆ ॥ ಸತ್ಯಭಾಮೆಯ ಅರಸನೆ ಶ್ರೀಕೃಷ್ಣಗೆ ನವರತ್ನದಾರತಿಯ ಬೆಳಗಿರೆ ॥ ಶೋಭಾನೆ ॥ ಸೋದರ ಮಾವನ ಮಧುರೆಲಿ ಮಡುಹಿದ ತಾಯಿಯ ಸೆರೆಯ ಬಿಡಿಸಿದ ॥ ತಾಯಿಯ ಸೆರೆಯ ಬಿಡಿಸಿದ ಹಯವದನ ದೇವಗಾರತಿಯ ಬೆಳಗಿರೆ ॥ ಶೋಭಾನೆ ॥ ಮುತ್ತೈದೆಯರೆಲ್ಲರೂ ಮುತ್ತಿನಾರುತಿ ಎತ್ತಿ ಹತ್ತಾವತಾರದ ಹಯವದನಗ ಹತ್ತಾವತಾರದ ಹಯವದನ ದೇವಗ ಹೊಸ ಮುತ್ತಿನಾರುತಿಯ ಬೆಳಗಿರೆ ॥ ಶೋಭಾನೆ ॥