ಜಯ ಜಯ ಜಗತ್ತ್ರಾಣ ಜಗದೊಳಗೆ ಸುತ್ರಾಣ
ಅಖಿಲಗುಣಸದ್ಧಾಮ ಮಧ್ವನಾಮ ॥ಪ॥


ಆವ ಕಚ್ಛಪರೂಪದಿಂದಲಂಡೋದಕದಿ
ಓವಿ ಧರಿಸಿದ ಶೇಷಮೂರುತಿಯನು
ಆವವನ ಬಲವಿಡಿದು ಹರಿಯ ಸುರರೈಯ್ದುವರು
ಆ ವಾಯು ನಮ್ಮ ಕುಲಗುರುರಾಯನು ॥‍೧॥‍‌‌‌‌


ಆವವನು ದೇಹದೊಳಗಿರಲು ಹರಿ ನೆಲೆಸಿಹನು
ಆವವನು ತೊಲಗೆ ಹರಿ ತಾ ತೊಲಗುವ
ಆವವನು ದೇಹದೊಳಹೊರಗೆ ನಿಯಾಮಕನು
ಆ ವಾಯು ನಮ್ಮ ಕುಲಗುರುರಾಯನು ॥೨॥


ಕರಣಾಭಿಮಾನಿ ಸುರರುಗಳು ದೇಹವ ಬಿಡಲು
ಕುರುಡ ಕಿವುಡ ಮೂಕನೆಂದೆನಿಸುವ
ಪರಮಮುಖ್ಯಪ್ರಾಣ ತೊಲಗಲಾ ದೇಹವನು
ಅರಿತು ಪೆಣವೆಂದು ಪೇಳ್ವರು ಬುಧಜನರು ॥೩॥


ಸುರರೊಳಗೆ ನರರೊಳಗೆ ಸರ್ವಭೂತಗಳೊಳಗೆ
ಪರತರನೆನಿಸಿ ನಿಯಾಮಿಸಿ ನೆಲೆಸಿಹನು
ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು
ಗುರುಕುಲತಿಲಕ ಮುಖ್ಯ ಪವಮಾನನು ॥೪॥


ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು
ವಾತಸುತ ಹನುಮಂತನೆಂದೆನಿಸಿದ
ಪೋತಭಾವದಿ ತರಣಿಬಿಂಬಕ್ಕೆ ಲಂಘಿಸಿದ
ಈತಗೆಣೆಗಾಣೆ ಮೂರ್ಲೋಕದೊಳಗೆ ॥೫॥


ತರಣಿಗಭಿಮುಖನಾಗಿ ಶಬ್ದಶಾಸ್ತ್ರವ ಪಠಿಸಿ
ಉರವಣಿಸಿ ಹಿಂದು ಮುಂದಾಗಿ ನಡೆದ
ಪರಮ ಪವಮಾನಸುತ ಉದಯಾಸ್ತಶೈಲಗಳ
ಭರದಿ ಐದಿದ ಈತಗುಪಮೆಯುಂಟೇ ॥೬॥


ಅಖಿಲವೇದಗಳ ಸಾರವ ಧರಿಸಿ ಮುನ್ನಿವನು
ನಿಖಿಲವ್ಯಾಕರಣಗಳ ಇವ ಪೇಳಿದ
ಮುಖದಲ್ಲಿ ಕಿಂಚಿದಪಶಬ್ದ ಇವಗಿಲ್ಲೆಂದು
ಮುಖ್ಯಪ್ರಾಣನನು ರಾಮನನುಕರಿಸಿದ ॥೭॥


ತರಣಿಸುತನನು ಕಾಯ್ದು ಶರಧಿಯನು ನೆರೆದಾಟಿ
ಧರಣಿಸುತೆಯಳ ಕಂಡು ದನುಜರೊಡನೆ
ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳ
ಉರುಹಿ ಲಂಕೆಯ ಬಂದ ಹನುಮಂತನು ॥೮॥


ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಬಲು ರಕ್ಕಸರನು
ಒರೆಸಿ ರಣದಲ್ಲಿ ದಶಶಿರನ ಹುಡಿಗಟ್ಟಿ ತಾ
ಮೆರೆದ ಹನುಮಂತ ಬಲವಂತ ಧೀರ ॥೯॥


ಉರಗಬಂಧಕೆ ಸಿಲುಕಿ ಕಪಿವರರು ಮೈ ಮರೆಯೆ
ತರಣಿಕುಲತಿಲಕನಾಜ್ಞೆಯ ತಾಳಿದ
ಗಿರಿಸಹಿತ ಸಂಜೀವನವ ಕಿತ್ತು ತಂದಿತ್ತ
ಧರೆಯೊಳಗೆ ಸರಿಯುಂಟೆ ಹನುಮಂತಗೆ ॥೧೦॥


ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಳಿಗೀಯೆ
ಭಜಿಸಿ ಮೌಕ್ತಿಕದ ಹಾರವನು ಪಡೆದ
ಅಜಪದವಿಯನು ರಾಮ ಕೊಡುವೆನೆನೆ ಹನುಮಂತ
ನಿಜಭಕುತಿಯನೆ ಬೇಡಿ ವರವ ಪಡೆದ ॥೧೧॥


ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ
ಸೋಮಕುಲದಲಿ ಜನಿಸಿ ಪಾರ್ಥರೊಡನೆ
ಭೀಮ ವಿಕ್ರಮ ರಕ್ಕಸರನು ಮುರಿದಟ್ಟಿದ
ಆ ಮಹಿಮ ನಮ್ಮ ಕುಲಗುರುರಾಯನು ॥೧೨॥


ಕರದಿಂದ ಶಿಶುಭಾವನಾದ ಭೀಮನ ಬಿಡಲು
ಗಿರಿಯೊಡೆದು ಶತಶೃಂಗವೆಂದೆನಿಸಿತು
ಹರಿಗಳಾ ಹರಿಗಳಿಂ ಕರಿಗಳಾ ಕರಿಗಳಿಂ
ಅರೆವ ವೀರನಿಗೆ ಸುರ-ನರರು ಸರಿಯೆ ॥೧೩॥


ಕುರುಪ ಗರಳವನಿಕ್ಕೆ ನೆರೆಯುಂಡು ತೇಗಿದಾ
ಉರಗಗಳ ಮೇಲ್ಬಿಡಲು ಅದನೊರಸಿದ
ಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರ
ಧರಿಸಿ ಜಾಹ್ನವಿಗೊಯ್ದ ತನ್ನನುಜರ ॥೧೪॥


ಅಲ್ಲಿರ್ದ ಬಕ-ಹಿಡಿಂಬಕರೆಂಬ ರಕ್ಕಸರ
ನಿಲ್ಲದೊರೆಸಿದ ಲೋಕಕಂಟಕರನು
ಬಲ್ಲಿದಸುರರ ಗೆಲಿದು ದ್ರೌಪದಿಯ ಕೈವಿಡಿದು
ಎಲ್ಲ ಸುಜನರಿಗೆ ಹರುಷವ ತೋರಿದ ॥೧೫॥


ರಾಜಕುಲವಜ್ರನೆನಿಸಿದ ಮಾಗಧನ ಸೀಳಿ
ರಾಜಸೂಯಯಾಗವನು ಮಾಡಿಸಿ
ಆಜಿಯೊಳು ಕೌರವರ ಬಲವ ಸವರುವೆನೆಂದು
ಮೂಜಗವರಿಯೆ ಕಂಕಣ ಕಟ್ಟಿದ ॥೧೬॥


ಮಾನನಿಧಿ ದ್ರೌಪದಿಯ ಮನದಿಂಗಿತವನರಿತು
ದಾನವರ ಸವರಬೇಕೆಂದು ಬೇಗ
ಕಾನನವ ಪೊಕ್ಕು ಕಿರ್ಮೀರಾದಿಗಳ ತರಿದು
ಮಾನಿನಿಗೆ ಸೌಗಂಧಿಕವನೆ ತಂದ ॥೧೭॥


ದುರುಳ ಕೀಚಕನು ತಾ ದ್ರೌಪದಿಯ ಚಲುವಿಕೆಗೆ
ಮರುಳಾಗಿ ಕರಕರೆಯ ಮಾಡಲವನಾ
ಗರಡಿಮನೆಯೊಳು ಬರಸಿ ಒರೆಸಿ ಅವನನ್ವಯದ
ಕುರುಪನಟ್ಟಿದ ಮಲ್ಲರನು ಸವರಿದ ॥೧೮॥


ವೈರಿ ದುಶ್ಶಾಸನನ ರಣದಲ್ಲಿ ಎಡೆಗೆಡಹಿ
ವೀರ ನರಹರಿಯ ಲೀಲೆಯ ತೋರಿದ
ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿ
ಓರಂತೆ ಕೌರವನ ಮುರಿದು ಮೆರೆದ ॥೧೯॥


ಗುರುಸುತನು ಸಂಗರದಿ ನಾರಾಯಣಾಸ್ತ್ರವನು
ಉರವಣಿಸಿ ಬಿಡಲು ಶಸ್ತ್ರವ ಬಿಸುಟರು
ಹರಿಕೃಪೆಯ ಪಡೆದಿರ್ದ ಭೀಮ ಹುಂಕಾರದಲಿ
ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ ॥೨೦॥


ನೀರೊಳಗಿದ್ದ ದುರ್ಯೋಧನನ ಹೊರಗೆಡಹಿ
ಊರುದ್ವಯವ ತನ್ನ ಗದೆಯಿಂದ ಮುರಿದ
ನಾರಿರೋದನ ಕೇಳಿ ಮನಮರುಗಿ ಗುರುಸುತನ
ಹಾರಿಹಿಡಿದು ಶಿರೋರತ್ನ ಪಡೆದ ॥೨೧॥


ಚಂಡವಿಕ್ರಮನು ಗದೆಗೊಂಡು ರಣದಿ ಭೂ-
ಮಂಡಲದೊಳಿದಿರಾಂತ ಖಳರನೆಲ್ಲಾ
ಹಿಂಡಿ ಬಿಸುಟಿಹ ವೃಕೋದರನ ಪ್ರತಾಪವನು
ಕಂಡು ನಿಲ್ಲುವರಾರು ತ್ರಿಭುವನದೊಳು ॥೨೨॥


ದಾನವರು ಕಲಿಯುಗದೊಳವತರಿಸಿ ವಿಬುಧರೊಳು
ವೇನನ ಮತವನರುಹಲದನರಿತು
ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ
ಮಾನನಿಧಿ ಮಧ್ವಾಖ್ಯನೆಂದೆನಿಸಿದ ॥೨೩॥


ಅರ್ಭಕತನದೊಳೈದಿ ಬದರಿಯಲಿ ಮಧ್ವಮುನಿ
ನಿರ್ಭಯದಿ ಸಕಲಶಾಸ್ತ್ರವ ಪಠಿಸಿದ
ಉರ್ವಿಯೊಳು ಮಾಯೆ ಬೀರಲು ತತ್ತ್ವಮಾರ್ಗವನು
ಸರ್ವ ಸುಜನರಿಗೆ ತಾ ತೋರಿ ಮೆರೆದಾ ॥೨೪॥


ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಂಬ
ದುರ್ವಾದಿಗಳ ಮತವನೆ ಖಂಡಿಸಿ
ಸರ್ವೇಶ ಹರಿ ವಿಶ್ವ ಸತ್ಯವೆಂದರುಹಿದಾ
ಶರ್ವಾದಿಗೀರ್ವಾಣಸಂತತಿಯಲಿ ॥೨೫॥


ಏಕವಿಂಶತಿ ಕುಭಾಷ್ಯಗಳ ಬೇರನು ತರಿದು
ಶ್ರೀಕರಾರ್ಚಿತನೊಲುಮೆ ಶಾಸ್ತ್ರ ರಚಿಸಿ
ಲೋಕತ್ರಯದೊಳಿದ್ದ ಸುರರು ಆಲಿಸುವಂತೆ
ಆ ಕಮಲನಾಭಯತಿನಿಕರಕೊರೆದ ॥೨೬॥


ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ
ಪದಕೆರಗಿ ಅಖಿಳವೇದಾರ್ಥಗಳನು
ಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವ
ಐದಿದ ಮಧ್ವಮುನಿರಾಯಗಭಿವಂದಿಪೆ ॥೨೭॥


ಜಯ ಜಯತು ದುರ್ವಾದಿಮತತಿಮಿರಮಾರ್ತಾಂಡ
ಜಯ ಜಯತು ವಾದಿಗಜಪಂಚಾನನ
ಜಯ ಜಯತು ಚಾರ್ವಾಕಗರ್ವಪರ್ವತಕುಲಿಶ
ಜಯ ಜಯ ಜಗನ್ನಾಥ ಮಧ್ವನಾಥ ॥೨೮॥


ತುಂಗಕುಲ ಗುರುವರನ ಹೃತ್ಕಮಲದೊಳು ನೆಲೆಸಿ
ಭಂಗವಿಲ್ಲದ ಸುಖವ ಸುಜನಕೆಲ್ಲ
ಹಿಂಗದೆ ಕೊಡುವ ನಮ್ಮ ಮಧ್ವಾಂತರಾತ್ಮಕನು
ರಂಗವಿಠಲನೆಂದು ನೆರೆ ಸಾರಿರೈ ॥೨೯॥


ಜಯ ಜಯ ಜಗತ್ತ್ರಾಣ ಜಗದೊಳಗೆ ಸುತ್ರಾಣ
ಅಖಿಲಗುಣಸದ್ಧಾಮ ಮಧ್ವನಾಮ ॥ಪ॥


॥ ಶ್ರೀ ಮಧ್ವನಾಮ ಸಂಪೂರ್ಣ ॥
॥ ಶ್ರೀಜಗನ್ನಾಥದಾಸವಿರಚಿತ ಫಲಸ್ತುತಿ ॥
ಸೋಮಸೂರ್ಯೋಪರಾಗದಿ ಗೋಸಹಸ್ರಗಳ
ಭೂಮಿದೇವರಿಗೆ ಸುರನದಿಯ ತಟದಿ
ಶ್ರೀಮುಕುಂದಾರ್ಪಣವೆನುತ ಕೊಟ್ಟ ಫಲವಕ್ಕು
ಈ ಮಧ್ವನಾಮ ಬರೆದೋದಿದವಗೆ ॥೧॥


ಪುತ್ರರಿಲ್ಲದವ ಸತ್ಪುತ್ರರೈದುವರು
ಸರ್ವತ್ರದಲಿ ದಿಗ್ವಿಜಯವಹುದು ಅನುದಿನ
ಶತ್ರುಗಳು ಕೆಡುವರಪಮೃತ್ಯು ಬರಲಂಜುವುದು
ಸೂತ್ರನಾಮಕನ ಸಂಸ್ತುತಿ ಮಾತ್ರದಿ ॥೨॥


ಶ್ರೀಪಾದರಾಯ ಪೇಳಿದ ಮಧ್ವನಾಮ ಸಂ-
ತಾಪಕಳೆದಖಿಳ ಸೌಖ್ಯವನೀವುದು
ಶ್ರೀಪತಿ ಜಗನ್ನಾಥವಿಠಲನ ತೋರಿ ಭವ-
ಕೂಪಾರದಿಂದ ಕಡೆ ಹಾಯಿಸುವುದು ॥೩॥


ಜಯ ಜಯ ಜಗತ್ತ್ರಾಣ ಜಗದೊಳಗೆ ಸುತ್ರಾಣ
ಅಖಿಲಗುಣಸದ್ಧಾಮ ಮಧ್ವನಾಮ ॥ಪ॥